ಭಾನುವಾರ, ಡಿಸೆಂಬರ್ 12, 2010

ಭಾನುವಾರದ ಒಂಟಿತನದ ಲಹರಿಯಲ್ಲಿ ಸ ರಿ ಗ ಮ ಪ

ಇಂದೂ ಕೊಡ ಎಂದಿನಂತೆಯೇ ಮೊಡಣದಲ್ಲಿ ಭಾಸ್ಕರ ನಗುತ್ತಾ ಮೊಡಿದನಾದರೂ’ನನ್ನ ಹೃದಯದಲ್ಲಿ,ಮನೆಯಲ್ಲಿ,ಮನದಲ್ಲಿ ಬರೀ ಖಾಲಿ ಖಾಲಿ ಏಕೆ?,ನನ್ನ ಜೀವನದಲ್ಲಿ ಅಂತಹ ವ್ಯತ್ಯಾಸ ಏನಾಯಿತು? ಹೀಗೇಕೆ ಆಯಿತು?’ ಎಂದು ಯೋಚಿಸುತ್ತಿರುವಾಗಲೇ ಮೊಬೈಲ್ ಕೋಳಿ ’ಬೆಳಗಾಗಿದೆ’ಎಂದು ಸುಪ್ರಭಾತ ಹಾಡತೊಡಗಿತು. ಕಣ್ಣು ಮುಚ್ಚಿಕೊಂಡೆ ಕೂಗುವ ಕೋಳಿಯ ತಲೆಯ ಮೇಲೆ ಮಟುಕಿದೆ ಮತ್ತು ಹಾಗೇ ಮಂಚದ ಮೇಲೆ ಹೊರಳಾಡುತ್ತಿದ್ದಂತೆಯೇ ಮತ್ತೆ ಅದೇ ಪ್ರಶ್ನೆ ’ ಮನಸ್ಸೆಲ್ಲಾ ಖಾಲಿ ಖಾಲಿ ಏಕೆ?’. ಮಾಗಿಯ ಚಳಿ ಬೇರೆ ಹೊದಿಕೆಯ ಜೊತೆ ಮಂಚದ ಹಾಸಿಗೆ ಕೂಡ ಮೈಗೆ ಅಂಟಿಕೊಂಡಂತೆ ಭಾಸವಾಯಿತು.
ಕಣ್ಣು ತೆರೆಯದೇ ಮನದಲ್ಲಿಯೇ’ತುಂಟ ಕೃಷ್ಣನ’ ಸ್ಮರಣೆ ಮಾಡುತ್ತಾ,ಬೆರಗುಗಣ್ಣಿನಿಂದ ಲೋಕವನ್ನೆಲ್ಲ ಬೆರಗುಗೊಳಿಸಿದ ಕೃಷ್ಣನ ಪಟವನ್ನು ನೋಡುತ್ತಾ ಎದ್ದೆ.ಬಚ್ಚಲ ಮನೆಯಲ್ಲಿ ನೀರಿನ ಸದ್ದು,ಕೈಬಳೆಗಳ,ಕಾಲು ಗೆಜ್ಜೆಯ ಸದ್ದಿಲ್ಲ-ತಟ್ಟನೆ ತಲೆಯಲ್ಲಿ ಬಂದದ್ದು " ಓ! ನೀನು ಇಲ್ಲ, ಮನೆಯಲ್ಲಿ ಇಲ್ಲ. ನಿನ್ನೆಯೇ ಊರಿಗೆ ಹೋದೆ’ಎಂದು ಹೆಂಡತಿ ಊರಿಗೆ ಹೋದದ್ದು ನೆನಪಿಗೆ ಬಂತು.ಮನದ ಖಾಲಿ ಖಾಲಿ ಯ ಪ್ರಶ್ನೆಗೆ ಉತ್ತರ ಟ್ಯೂಬ್ ಲೈಟ್ ಮಂಡೆಗೆ ಕೊನೆಗೂ ಹೊಳೆಯಿತು. ಹೊಳೆದದ್ದು ಬೇಸರವನ್ನೂ ಮತ್ತೂ ಹೆಚ್ಚಿಸಿತು.ಆಫೀಸ್ ಬೇರೆ ಇಲ್ಲ ಇವತ್ತು ಭಾನುವಾರ ವೆಂದು ಗೊತ್ತಾದ ಮೇಲಂತೂ ಬೇಸರ ನೂರ್ಮಡಿಯಾಯಿತು. ಬೇಸರ ಎಷ್ಟಾದರೂ ಹೊಟ್ಟೆಯ ಗೂಡಲಿ ಮೊಡುವ ಹಸಿವಿನ ತಲ್ಲಣ,ಚುರುಕು ಗಮನವನ್ನು ಬೇರೆಡೆಗೆ ಅಂದರೆ ಅಡುಗೆ ಮನೆ...... ಸಾರಿ! ಹೆಂಡತಿ ಅಥವಾ ತಾಯಿ ಮನೆಯಲ್ಲಿದ್ದರೆ ಮಾತ್ರ ಆ ಕಡೆ ಗಮನ ಇಲ್ಲವಾದಲ್ಲಿ ಮಾವನ ಮನೆ ಅರ್ಥಾತ್ ದರ್ಶಿನಿಯ ಕಡೆಗೆ ಕಾಲು ಬುದ್ಧಿ ಹೇಳೇ ಹೇಳುತ್ತೆ ಅಲ್ಲವೇ!?.
ಸ್ನಾನ,ಸಂಧ್ಯಾವಂದನೆ ಮಾಡುತ್ತಾ ದೇವರ ದೀಪ ಹೊತ್ತಿಸಿ " ಅಜ್ಯಾನದ ಅಂಧಕಾರದಿಂದ ತುಂಬಿರೋ ಮನಗಳಲ್ಲಿ ಜ್ಯಾನದ ಜ್ಯೋತಿ ಹೊತ್ತಿಸುವುದು ಹೇಗೆ? ದಾರಿ ತೋರಿಸು" ಎಂದು ಪ್ರಾರ್ಥಿಸಿದೆ.ತಂದೆ-ತಾಯಿ ನನಗೆ ಮದುವೆ ಮಾಡಿ ಜವಾಬ್ದಾರಿಯನ್ನು ಹೆಚ್ಚಿಸಿದ್ದಲ್ಲದೇ ಎರಡು ಮನೆಗಳ ಸಂಬಂಧಗಳನ್ನು ಮಧುರವಾಗಿಸಿಕೊಳ್ಳುಲು ಹೆಣಗಾಡಬೇಕಾಗಿದೆಯಲ್ಲಾ ಎಂಬ ಆತಂಕವೂ ಮನದಲ್ಲಿ ಮೊಡಿತು. ಅರ್ಥಮಾಡಿಕೊಳ್ಳಲಾಗದ ಸ್ಥಿತಿಯಲ್ಲಿರೋ ತಂದೆ-ತಾಯಿ, ಪ್ರೀತಿ-ವಿಶ್ವಾಸ, ಸಂಬಂಧಗಳ ಬಗ್ಗೆ ಸೀಮಿತಾರ್ಥದಲ್ಲಿ ಸಂಕುಚಿತ ಸ್ವಭಾವ, ಬಾಹ್ಯ ಕಣ್ಣಿಗೆ ಮಾತ್ರವಲ್ಲದೆ ಆಂತರ್ಯದ ಒಳಗಣ್ಣಿಗೆ ಪೊರೆಯನ್ನು ಬೆಳೆಸಿಕೊಂಡಿರುವವರಿಗೆ ಯಾವ ಚಿಕಿತ್ಸೆ ಕೊಡಿಸುವುದು? ಯಾರಿಂದ ಕೊಡಿಸುವುದು? ಓ ದೇವರೇ! ಅವರಿಗೆಲ್ಲಾ ಅರಿಯುವ ಶಕ್ತಿ ಕೊಡು. ಸಂಸಾರ ಜಂಜಡದಲ್ಲಿ ಮನಸ್ಸು ಜಡವಾಗದ ಹಾಗೆ ನೋಡಿಕೊಳ್ಳುವುದು ಹೇಗೆ? ಮನುಷ್ಯನಾದವನಿಗೆ ಸಂಬಂಧಗಳು ಬೇಕು. ಎಂತಹ ಸಂಬಂಧಗಳು ಬೇಕು? ಸ್ಪೂರ್ತಿ ಕೊಡುವ, ಚೇತನದಾಯಕ ವಾಗುವ ಸಂಬಂಧಗಳು, ಏಳಿಗೆಗೆ ದಾರಿಯಾಗುವ ಸಂಬಂಧಗಳು ಬೇಕೇ ಬೇಕು. ಆದರೆ ದೊಡ್ಡವರೆನಿಸಿಕೊಂಡವರಿಗೆ ಇದೆಲ್ಲಾ ಏಕೆ ಅರ್ಥವಾಗೋದಿಲ್ಲ. ಸ್ವಪ್ರತಿಷ್ಟೆ,ಸ್ವಾರ್ಥಗಳೇ ಹೆಚ್ಚಾಗಿ ಹೋಯಿತೇ? ಜಗಳದಿಂದ ಯಾವ ಅಭಿವೃದ್ಧಿ ಸಾಧ್ಯ? ಅಧೋಗತಿಯ ಅಭಿವೃದ್ಧಿಯಷ್ಟೇ!, ಅಶಾಂತಿಯ ಏಳಿಗೆಯಷ್ಟೇ!.
ಮದುವೆ! ಅರ್ಥಾತ್ ಮಧು+way ಅಂದರೆ ಸಿಹಿ,ಅಭಿವೃದ್ಧಿ,ಸಂಬಂಧ,ಜೀವನ ಸಾಧನೆ, ಮೋಕ್ಷ ಸಾಧನೆಗೆ ದಾರಿಯೇ ಅಲ್ಲವೇ?. ಸಂಬಂಧಗಳನ್ನು ಮುರಿದುಕೊಳ್ಳುವುದು ತುಂಬಾ ಸುಲಭ, ಸಹಬಾಳ್ವೆಯನ್ನು ಸಾಧಿಸುವುದು, ಸಾಧನೆಯ ತಪಸ್ಸೇ ಅಲ್ಲವೇ?. ಮರೀಚಿಕೆಯಂತೂ ಅಲ್ಲ, ಸ್ವಲ್ಪ ತಾಳ್ಮೆ,ಸಹನೆಯ ಅಗತ್ಯತೆ ಬೇಕು. ಹಾಗೆ ಪ್ರತಿಷ್ಟೆ,ಸ್ವಾರ್ಥ,ಸಂಕುಚಿತ ಸ್ವಭಾವಗಳನ್ನು ಬದಿಗೊತ್ತಿ ಆಲೋಚಿಸಿದರೆ ಸತ್ಯದರ್ಶನವಾಗುತ್ತದೆ.ದೊಡ್ಡೋರು ಓಕೆ, ಆದರೆ ದ್ವೇಷ ಯಾಕೆ?. ದ್ವೇಷದಿಂದ ಸಾಧಿಸುವುದಾದರೂ ಏನು?ಮೊರು ಮುಕ್ಕಾಲು ದಿವಸದ ಈ ಬದುಕಿನಲ್ಲಿ ದ್ವೇಷ ಜ್ವಾಲೆಯಿಂದ ಉರಿದುಹೋಗುವುದಕ್ಕಿಂತ ಪ್ರೀತಿಯ,ಶಾಂತಿಯ ದೀಪವಾಗಿ ಉರಿದು ಹಲವರಿಗೆ ದಾರಿದೀಪವಾದರೆ ಸಾರ್ಥಕವಲ್ಲವೇ? ಓ ಹೊಟ್ಟೆ ಚುರುಗುಟ್ಟುತ್ತಿದೆ ದೇವರೇ ಓ ನನ್ನಲ್ಲಿರುವ ದೇವರೇ ನಿನ್ನನ್ನು ಇನ್ನು ಹೆಚ್ಚುಹೊತ್ತು ಸತಾಯಿಸುವುದಿಲ್ಲವೆಂದು ಸಮಾಧಾನ ಪಡಿಸುತ್ತಾ. ಅಗರಬತ್ತಿಯನ್ನು ಹೊತ್ತಿಸಿ " ಶಾಂತಿ ಮನೆಯಲೆಲ್ಲಾ,ಎಲ್ಲರ ಮನಗಳಲ್ಲೂ ಪಸರಿಸಲಿ" ಎಂದು ಪ್ರಾರ್ಥಿಸಿದೆ.
ಧಿರಿಸುಗಳನ್ನು ಧರಿಸಿ ಹೊರಡಲನುವಾದೆ. ಮನಸ್ಸು ಶಾಂತವಾಗಿತ್ತು. ನನ್ನ ಹೆಂಡತಿಯ ಅಚ್ಚುಕಟ್ಟುತನಕ್ಕೆ ಮನಸೋತು, ಮನದಲ್ಲೆ ಹೆಮ್ಮೆ ಪಟ್ಟೆ. ಕನ್ನಡಿಯ ಮುಂದೆ ತಲೆ ಬಾಚಿಕೊಳ್ಳುತ್ತಾ, ಬಾಲ್ಡ್ ಆಗುತ್ತಿರುವುದಕ್ಕೆ ಬೇಸರಪಟ್ಟುಕೊಳ್ಳುತ್ತಾ, ಮೊದಲ ವಾರ್ಷಿಕೊತ್ಸವಕ್ಕೆ ಹೆಂಡತಿ ಉಡುಗೊರೆಯಾಗಿ ಕೊಟ್ಟ body spray ಕಂಕುಳಲ್ಲಿ sparay ಮಾಡಿಕೊಂಡೆ, ಇಸ್ತ್ರಿ ಮಾಡಿಟ್ಟಿದ ಅಂಗಿಯನ್ನು ಧರಿಸಿ, ಮದುವೆಯಲ್ಲಿ ಕೊಟ್ಟ denim ಪೌಡರನ್ನು ಮುಖಕ್ಕೆ ಹಚ್ಚಿಕೊಂಡೆ ಹಾಗೇ ನನ್ನ ಆಫೀಸಿನ ಪ್ಯಾಂಟಿನ ಜೇಬಿನಲ್ಲಿಟ್ಟಿದ್ದ ಮನೆಯ ಬೀಗದಕೈಯನ್ನು ತೆಗೆದುಕೊಂಡೆ. ಮದುವೆಯಲ್ಲಿ ಕೊಟ್ಟ Sonata ಕೈ ಗಡಿಯಾರವನ್ನು ಎಡಗೈಗೆ ಕಟ್ಟಿಕೊಂಡೆ, ಅದು ’೯.೦೦’ ಗಂಟೆಯಾಗಿದೆ ಎಂದು ಹೇಳುತ್ತಿತ್ತು. TV ಯನ್ನು ಆನ್ ಮಾಡಿದೆ ಈಟೀವಿ ಚಾನಲ್ ಹಾಕಿದೆ " ಮುಖ್ಯಾಂಶಗಳು ಖಾತೆ ಹಂಚಿಕೆ ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಖ್ಯಾತೆಯಿಲ್ಲ" ಆದರೆ ನಮ್ಮ ಸಮ್ಮಿಶ್ರ ಸರ್ಕಾರ (ಧಾಂಪತ್ಯ ಜೀವನ)ದ ಪಕ್ಷ ವರಿಷ್ಟರೀರ್ವರಲ್ಲಿ ಗೊಂಧಲವಿದೆ, ಮಾತುಕತೆಗೆ ಸಂದರ್ಭಗಳೇ ಸಿಗುತ್ತಿಲ್ಲ, ಬಂಡಾಯದ ಗಾಳಿಯಿದೆ, ಸಂಧಾನಕ್ಕೆ ಸಂದರ್ಭಗಳು ಬೇಕು, ನಾನಂತೂ ಅಶಾವಾದಿಯೇ!" ದೀಪವು ನಿನ್ನದೇ, ಗಾಳಿಯೊ ನಿನ್ನದೇ, ಆರದಿರಲಿ ಬದುಕು"," ಹಾಲಲ್ಲಾದರೂ ಹಾಕು,ನೀರಲ್ಲಾದರ್ಯ್ ಹಾಕು ರಾಘವೇಂದ್ರನೆ" ಎಂಬೆಲ್ಲಾ ಆಲೋಚನೆಗಳು ಬೆಳ್ಮೋಡಗಳಾಗಿ ಮನದಲ್ಲಿ ಆಶಾಕಿರಣವನ್ನು ಬಿತ್ತುತ್ತಿತ್ತು, ವಾರ್ತೆಗಳು ಮುಗಿದಿತ್ತು. TV ಯನ್ನು ಆಫ್ ಮಾಡಿದೆ. ಹೊಟ್ಟೆಯ ಚುರು ಚುರು ಹೆಚ್ಚಾಗುವುದರಲ್ಲಿ ಮನೆಯ ಬಾಗಿಲಿಗೆ ಬೀಗ ಹಾಕಿ ಚಪ್ಪಲಿಯನ್ನು ಧರಿಸಿ ಹೊರಟೆ. "ಓ ಆ ಕಬ್ಬಿಣದ ಬಾಗಿಲನ್ನು ಹಾಕುವುದನ್ನೇ ಮರೆತೆ ಇಲ್ಲದಿದ್ದರೆ ನನ್ನ ಓನರ್ ಅಜ್ಜಿ " ಬಿಸಿಲಿಗೆ ಬಾಗಿಲು ಹಾಳಾಗುತ್ತೆ ನಾಗೇಶ ಬಾಗಿಲು ಹಾಕಿಕೊಂಡು ಹೋಗು" ಎಂದೆಲ್ಲಾ ಉಪದೇಶಿಸುತ್ತೆ ಎಂದು ಕೊಳ್ಳುತ್ತಾ ಮಹಡಿಯ ಮೆಟ್ಟಿಲುಗಳನ್ನು ಇಳಿಯ ತೊಡಗಿದೆ. ಕಾಂಪೌಂಡ್ ಗೇಟಿನ ಬಳಿಯೇ ಓನರ್ ಅಜ್ಜಿ ನಿಂತಿತ್ತು. ನನ್ನನ್ನು ನೋಡಿ " ನಾಗೇಶ ನೀನು ಮನೆಯಲ್ಲೇ ಇದ್ದೀಯ? ಎಲ್ಲಿ ನಿನ್ನ ಹೆಂಡತಿ?ತಿಂಡಿಯಾಯ್ತಾ?........ ನೂರಾರು ಪ್ರಶ್ನೆಗಳು ರೈಲ್ವೇ ಭೋಗಿಗಳಂತೆ ಹಾದುಹೋದವು. ಎಲ್ಲಕ್ಕೂ ನನ್ನ ಬಳಿಯಿದ್ದ ಉತ್ತರ " ಉಂ...ಉಂ....ಉಂ...." ಎಂದು ರೈಲು ಕೂಗುವ ಹಾಗೆ ಹೇಳುತ್ತಾ ತಲೆಯಾಡಿಸುತ್ತಾ ಗೇಟು ದಾಟಿ ಹೊರಟೆ.
ದಿವಸದ ಕೆಲಸಗಳನ್ನು ಮನದಲ್ಲೇ ಯೋಚಿಸುತ್ತಾ SLV corner ದರ್ಶಿನಿ ತಲುಪಿ ಹತ್ತು ರುಪಾಯಿ ಕೊಟ್ಟು ಎರಡು ಇಡ್ಲಿ ಹಾಗು ಒಂದು ಕಪ್ ಕಾಫಿ ತೆಗೆದುಕೊಂಡೆ. ಇಡ್ಲಿ ಹೊಟ್ಟೆಯಲ್ಲಿ ಇಳಿದ ಮೇಲೆ ಬಿಸಿ ಕಾಫಿ ಹೊಟ್ಟೆಗೆ ಇಳಿಸಿದೆ. ಹೊಟ್ಟೆಯಲ್ಲಿದ್ದ ಪರಮಾತ್ಮ ಸಂತುಷ್ಟಗೊಂಡ.ಅಲ್ಲಿಂದ ಮನೆಗೆ ಹೊರಟೆ. ಖಾಲಿ,ಖಾಲಿ ಬಸ್ಸುಗಳು ಇಂದು ಭಾನುವಾರ ಎಂದು ಹೇಳುತ್ತಿರುವಂತೆ ಭಾಸವಾಗುತ್ತಿತ್ತು. ಮನೆಗೆ ಹಿಂತಿರುಗಿ ಮುಂದಿನ ಕಾರ್ಯಕ್ರಮಗಳ ಬಗ್ಗೆ ಯೋಚಿಸತೊಡಗಿದೆ.ಗಾಂಧಿ ಬಜಾರ್ ಗೆ ತೆರಳಿ MBA ಪುಸ್ತಕಗಳ ಶೋಧನೆ,ಒಳ್ಳೆಯ ಕನ್ನಡ ಪುಸ್ತಕದ ಶೋಧನೆ ಎಂದು ಯೋಚಿಸುತ್ತಿರುವಾಗಲೇ MA(ಕನ್ನಡ) ದ ಅಂತಿಮ ವರ್ಷದ ಪರೀಕ್ಷೆಗೆ ಎ.ಎನ್.ಮೊರ್ತಿರಾಯರ " ಆಷಾಡಭೂತಿ" ನಾಟಕದ ಪ್ರತಿಗೆ ಹುಡಕಬೇಕೆನಿಸಿತು ಹಾಗು ಅವರು ಬರೆದ ’ಲಲಿತ ಪ್ರಬಂಧಗಳನ್ನು’ ಓದಬೇಕೆನಿಸಿತು.Citi ಬ್ಯಾಂಕಿನ Debit ATM ಕಾರ್ಡ್ ಜೇಬಿಗೆ ಇಳಿಬಿಡುತ್ತಾ ಹೊರಟೆ ಬಸ್ಸ್ ನಿಲ್ದಾಣಕ್ಕೆ. ಅನಂತರ ಬಂದು ಬಾಕಿ ಇರುವ MBA Assignments ಬೇರೆ ಬರೆಯಬೇಕಾಗಿತ್ತು ಎಂದು ಯೋಚಿಸುತ್ತಾ ಶ್ರೀನಗರದ ಬಸ್ಸ್ ನಿಲ್ದಾಣಕ್ಕೆ ಹೊರಟೆ.
ಶಿವಾಜಿನಗರದ ಕಡೆಗೆ ಹೊರಡುವ ೩೭ ನೇ ನಂ. ಬಸ್ಸಿನಲ್ಲಿ ಕುಳಿತೆ.೫.೦೦ರೂ ಕೊಟ್ಟು ’ಗಾಂಧಿ ಬಜಾರ್’ಗೆ ಟಿಕೆಟ್ ಕೊಡಿ ಎಂದೆ. ಮಹಿಳಾ ಕಂಡಕ್ಟರ್ ಟಿಕೆಟ್ ನೀಡಿದಳು. ಹನುಮಂತನಗರದ ಬೀದಿ ಬೀದಿಗಳಲ್ಲಿ ಶಬ್ದ ಮಾಡುತ್ತಾ ಹೊರಟಿತು ಬಸ್ಸು.ತಿರುವು-ಮರುವುಗಳನ್ನು ದಾಟಿ ನ್ಯಾಷನಲ್ ಕಾಲೇಜ್ ಬಳಿಯ ನಿಲ್ದಾಣದಲ್ಲಿ ಇಳಿದೆ. ಖಾಲಿ ಖಾಲಿ ರಸ್ತೆಗಳು,ಬಾಗಿಲು ಬೀಗ ಜಡಿದ ಅಂಗಡಿಗಳು ಭಾನುವಾರವೆಂದು ಒತ್ತಿ-ಒತ್ತಿ ಹೇಳುತ್ತಿರುವಂತೆ ಭಾಸವಾಯಿತು. "ಹಾಂ! ಇಲ್ಲೇ ಮುಕ್ತಾ ಧಾರಾವಾಹಿಯ ನಂಜುಂಡನನ್ನು ನಾನು ಮಾತನಾಡಿಸಿದ್ದು, ಒಳ್ಳೆಯ ಹುಡುಗ ನನ್ನನ್ನು ಹಾಗು ನನ್ನ ಶ್ರೀಮತಿಯನ್ನು ಮನೆಗೆ ಕರೆದ ಸಂಜೆಯ ಕಾಫಿಗೆ". ಎಂದು ಮನದಲ್ಲೇ ಆ ದಿನದ ಭೇಟಿ ಕಣ್ಣಮುಂದೆ ಬಂದು ಹೋಯಿತು. ಗಾಂಧಿ ಬಜಾರಿನ ಹೂವಿನ ಮಂಡಿಯ ಹೂಗಳ ಘಮ ಘಮ ಪರಿಮಳ ಸೂಸುವ ಹೂಗಳ ಸುಗಂಧವನ್ನು ಆಸ್ವಾದಿಸುತ್ತಾ, ಬೀಡಿ ಹಿಗೆಯನ್ನು ಪಕ್ಕದಲ್ಲಿಯೇ ಉಗುಳುತ್ತಾ ಹೋದವನನ್ನು ಮನದಲ್ಲಿಯೇ ಬೈದುಕೊಳ್ಳುತ್ತಾ Citi bank ATM ತಲುಪಿದೆ. ಕ್ಯೂ ನಲ್ಲಿ ನಿಂತು ನನ್ನ ಸರದಿಗಾಗಿ ಕಾದೆ, ನನ್ನ ಸರದಿ ಬಂದಾಗ ೧೫೦೦ ರೂ ತೆಗೆದುಕೊಂಡೆ, ಬ್ಯಾಲೆನ್ಸ್ ನೋಡಿ ಮನಸ್ಸಿಗೆ ಕಸಿವಿಸಿಯಾಯಿತು. ಅಲ್ಲಿಂದ ಬೇಗ ಬೇಗ ಹೊರಟೆ ’Cridit card salesmen' ಮುತ್ತಿಗೆ ಹಾಕುವ ಮುನ್ನ ಹೊರಡಬೇಕೆಂದು ಬೇಗ ಬೇಗ ಮೆಟ್ಟಿಲುಗಳನ್ನು ಇಳಿದು ಹೊರಟೆ. ಗಾಂಧಿ ಬಜಾರ್ ರಸ್ತೆಗಳು ಸಾಮಾನ್ಯವಾಗಿ ವಾಹನ ದಟ್ಟಣೆಯಿಂದ ಕೂಡಿರುತ್ತದೆ.ಎರಡು ಕಣ್ಣಿದ್ದರೂ ಮತ್ತೆರಡು ಕಣ್ಣುಗಳ ಅವಶ್ಯಕತೆಯಿದೆ ರಸ್ತೆ ದಾಟಲು. ನಮ್ಮ BMTC ಯವರು ಇಲ್ಲಿ ಯಾಕೆ 'one way' ಮಾಡಿಲ್ಲ ಎಂಬ ಪ್ರಶ್ನೆಯೊ ಮನದಲ್ಲಿ ಮೊಡಿತು.ರಸ್ತೆ ದಾಟಿ ಶ್ರೀ ಬುಕ್ ಹೌಸ್ ಗೆ ಹೋದೆ ರಾಶಿ ರಾಶಿ ಪುಸ್ತಕಗಳನ್ನು ನೋಡಿ ಮನದಲ್ಲಿ ಹರ್ಷ ತುಂಬಿತು.ಪುಸ್ತಕಗಳ ಅಭಿಮಾನಿ ನಾನು, ಪ್ರಪಂಚದ ಎಲ್ಲಾ ಪುಸ್ತಕಗಳನ್ನು ಓದಬೇಕೆನ್ನುವ ಆಸೆ, ಆದರೆ ಎಲ್ಲಾ ಕೊಂಡು ಓದುವುದಕ್ಕಾಗುವುದಿಲ್ಲ. ನನ್ನ ಜೀವಿತದಲ್ಲಿ ಎಷ್ಟು ಪ್ರಾಪ್ತಿ ಎಂದು ಆ ಭಗವಂತ ಬರೆದಿದ್ದಾನೋ ನಾನರಿಯೆ. ಬದುಕಿರುವವರೆಗೂ ಅದು ನನ್ನ ಜೊತೆಯಲ್ಲಿರಲಿ ಎಂದು ಬಯಸುತ್ತೇನೆ.ನನಗೆ ಬೇಕಾದ MBA ಪುಸ್ತಕ ಇನ್ನೂ ಬಂದಿರಲಿಲ್ಲ. ಹಾಗೆಯೇ ಪುಸ್ತಕಗಳ rack ನಲ್ಲಿದ್ದ ಪುಸ್ತಕಗಳನ್ನು ಕೈಗೆತ್ತಿಕೊಳ್ಳುತ್ತಾ,ಪುಸ್ತಕಗಳ ಮೈದಡವುತ್ತಾ ಕೆಲ ಸಮಯ ಪುಸ್ತಕಗಳೊಡನೆ ಕಳೆದೆ. ಆರ್,ಕೆ.ನಾರಾಯಣ ರ ’Dark Room' ಹಾಗು technical ಪುಸ್ತಕ ಕೊಂಡುಕೊಂಡು ಅಲ್ಲಿಂದ ಹೊರಟೆ.ವಿದ್ಯಾರ್ಥಿ ಭವನದ ಮುಂದೆ ಹೋಗುತ್ತಾ ಮಸಾಲೆ ದೋಸೆ ತಿನ್ನಬೇಕೆನಿಸಿತು ಆದರೆ "ಬಿಡುವಿನ ಸಮಯ" ಎಂಬ ತೂಗು ಬೋರ್ಡ್ ನೋಡಿ ಆಸೆಯೆಲ್ಲಾ ಮನದಲ್ಲೇ ಕಮರಿಹೋಯಿತು.
ಅಲ್ಲಿಂದ ಅಂಕಿತ ಪುಸ್ತಕದ ಅಂಗಡಿಗೆ ಬಂದೆ,ಅಲ್ಲಿ ಎ.ಎನ್. ಮೊರ್ತಿರಾಯರ ಪುಸ್ತಕಗಳಿಗೆ ಹುಡುಕಾಟ ನಡೆಸಿದೆ.ಅದೇ ಹುಡುಕಾಟದಲ್ಲಿ ಕಣ್ಣಿಗೆ ಬಿದ್ದದ್ದು ರವಿಬೆಳೆಗೆರೆಯ "ಗಾಂಧಿ ಮತ್ತು ಗೂಡ್ಸೆ" ಪುಸ್ತಕ ಕೊಳ್ಳಬೇಕೆನಿಸಿತು ಆದರೆ ಅದು ನನ್ನ plan ನಲ್ಲಿ ಇರಲಿಲ್ಲ ಮುಂಬರುವ ತಿಂಗಳಿನಲ್ಲಿ plan ಮಾಡೋಣ ಅಂತ ಸುಮ್ಮನಾದೆ. ಎ.ಎನ್. ಮೊರ್ತಿರಾಯರ " ಲಲಿತ ಪ್ರಬಂಧಗಳು" ಹಾಗು " ಆಷಾಡಭೂತಿ" ನಾಟಕದ ಪುಸ್ತಕವನ್ನು ಕೊಂಡುಕೊಂಡೆ. ಗಾಂಧಿ ಬಜಾರ್ ನಿಂದ ಬೀದಿಗಳಲ್ಲಿ ಒಂಟಿಯಾಗಿ ಓಡಾಡುವುದು ಕಷ್ಟವೆನಿಸಿತು ಜೊತೆಯಲ್ಲಿ ನನ್ನ ಶ್ರೀಮತಿ ಇದ್ದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತೆನಿಸಿತು.ಪುಸ್ತಕಗಳನ್ನು ಕಂಡರೆ ಅವಳಿಗೆ ಅಷ್ಟಕಷ್ಟೇ!, ಅವಳಿಗೆ ನಾನು ಪುಸ್ತಕದ ಅಂಗಡಿಗೆ ಹೋಗೋದು ಇಷ್ಟವಿಲ್ಲ ಗೊತ್ತಿದೆಯಾದರೂ ಅವಳು ಜೊತೆಗಿದ್ದರೆ ಅವಳ ಹುಸಿಕೋಪ ನೋಡೋದಕ್ಕಾದರೂ ನಾನು ಪುಸ್ತಕದ ಅಂಗಡಿಗೆ ಹೋಗಬೇಕೆನಿಸುತ್ತದೆ ಆದರೆ ಇಂದು ಅವಳು ನನ್ನ ಜೊತೆಯಲ್ಲಿಲ್ಲ ಮನಸ್ಸು ಬೇಸರಿಸುತ್ತಿತ್ತು.ಗಾಂಧಿ ಬಜಾರಿನ ರಸ್ತೆಯಲ್ಲಿ ಏಕಾಂಗಿಯಾಗಿ ಆಶ್ರಮ ವೃತ್ತದವರೆಗೂ ನಡೆದೆ....ನಡೆದೆ.
T12 ಬಸ್ಸಿನಲ್ಲಿ ಶ್ರೀನಗರ ತಲುಪಿದೆ.SLV corner ದರ್ಶಿನಿ ತಲುಪಿ ಕಾಫಿ ಹೀರಿ ಮನೆಯ ಕಡೆಗೆ ಹೆಜ್ಜೆ ಹಾಕತೊಡಗಿದೆ. ಮನೆಯನ್ನು ತಲುಪಿ ಪುಸ್ತಕದ ಒಳಗೆ ಪ್ರಯಾಣಿಸಬೇಕೆನಿಸಿತು. ಊಟ ಬೇಡವೆನಿಸಿತು,ಓದಿನ ಹಸಿವು ಹೆಚ್ಚಾಗಿತ್ತು. ಓದಿನಲ್ಲಿ ಮುಳುಗಿಹೋದೆ.
ಸಂಜೆಯ ಭಾಸ್ಕರ ದಿಗಂತವನ್ನು ಕೆಂಪಾಗಿಸಿ ಬರುವೆ ಎಂದು ದಿನಕ್ಕೆ ಶುಭಾಷಯ ಹೇಳುತ್ತಿದ್ದ. ಮನದ ಖಾಲಿಯನ್ನು ಅವಳ ನೆನಪನ್ನು ಹೃದಯದೊಳಗೆ ಖಾಲಿಯಾಗದ ಹಾಗೆ ತುಂಬಿಕೊಳ್ಳುತ್ತಿದೆ ರಾತ್ರಿ ನಿದ್ದೆಗೆ ಜಾರಿ.

ಶುಕ್ರವಾರ, ಡಿಸೆಂಬರ್ 10, 2010

ಕಾರ್ಮೋಡ

ಅವರಿಬ್ಬರೂ ಹೇಳಿಮಾಡಿಸಿದ ಜೋಡಿ,ಎಷ್ಟು ಅನ್ಯೋನ್ಯತೆ!,ಅವರ ಪ್ರೀತಿ ಅನನ್ಯ. ಇನ್ನೂ ಕಾಲೇಜು ಮುಗಿಯದ ಆ ದಿನಗಳು ಯಾವ ವಿಷಯಗಳೇ ಆಗಲಿ ಅದು ಓದಿನ ವಿಷಯವೇ ಇರಲಿ ಇಲ್ಲ ಅದು ಸಾಂಸ್ಕೃತಿಕ ಚಟುವಟಿಕೆಯೇ ಇರಬಹುದು, ಅದು ಆಟದ ವಿಷಯವೇ ಇರಬಹುದು. ಅವರಿಬ್ಬರೂ ಯಾವಾಗಲೂ ಮೊದಲಿಗರು. ಆಕೆ ಮೌನಿ ಆದರೆ ವಿಷಯಗಳ ಚರ್ಚೆಯಲ್ಲಿ ಮಹಾವಾಗ್ಮಿ. ಅವನೋ ತುಂಬಾ ವಾಗ್ಮಿ ಎಲ್ಲಾ ವಿಷಯಗಳಲ್ಲೂ.
ಕಾಲೇಜಿನ ಮೊದಲ ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಚರ್ಚಾಸ್ಪರ್ಧೆಯಲ್ಲಿ ಅವರಿಬ್ಬರ ವಾಗ್ಝರಿ ನಿರ್ಣಾಯಕರ ತೀರ್ಪಿಗೆ ಸವಾಲಾಗಿತ್ತು. ಇಬ್ಬರಿಗೂ ಪ್ರಥಮ ಬಹುಮಾನ ಘೋಷಿಸಿ ನಿರ್ಣಾಯಕರು ಕೈ ತೊಳೆದುಕೊಂಡಿದ್ದರು. ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ತನ್ನ ಕಾಲೇಜಿಗೆ ಪಾರಿತೋಷಕ ತಂದಿತ್ತರು. ಹೀಗೆ ಮೊರು ವರ್ಷಗಳೂ ಸಾಂಸ್ಕೃತಿಕ ಸ್ಪರ್ಧೆಗಳೇ ಅಲ್ಲದೇ, ಪರೀಕ್ಷೆಗಳಲ್ಲೂ ಸಮಾನವಾಗಿ ಅಂಕಗಳನ್ನು ಗಳಿಸಿ ಕಾಲೇಜಿಗೆ ಹಾಗು ಊರಿಗೆ ಹೆಸರು ತಂದವರು.ಹದಿಹರೆಯದ ಯೌವನದ ಮಧುರ ತಂಗಾಳಿಗೆ ಸೋತು ಪ್ರೇಮಿಗಳಾದವರು. ಯಾರಿಗೆ ಯಾರು ಸೋತರೋ? ಅದೊಂದು ಯಕ್ಷ ಪ್ರಶ್ನೆಯೇ ಸರಿ.
ಅವನೋ ನನ್ನ ಪ್ರಾಣ ಸ್ನೇಹಿತ. ಎಲ್ಲಾ ವಿಚಾರಗಳನ್ನು ನಾವು ವಿನಿಮಯ ಮಾಡಿಕೊಳ್ಳುತ್ತಿದ್ದೆವು. ಅಕೆಯ ವಿಷಯವೂ ಅಷ್ಟೇ ಅವನೇ ಬೇಕಾದಷ್ಟು ಸಲ ಹೇಳುತ್ತಿದ್ದ " ಅಕೆ ನನ್ನ ಪ್ರಾಣ. ಯಾವ ಜನುಮದ ಸುಕೃತವೋ, ಏನೋ ತಿಳಿಯದು. ನಾನು ತುಂಬಾ ಭಾಗ್ಯಶಾಲಿ. ನಿನ್ನಂತಹ ಪ್ರಾಣ ಸ್ನೇಹಿತ, ಅವಳಂತಹ ಪ್ರಾಣ ಪ್ರಿಯೆಯನ್ನು ,ದೇವರಂತಹ ತಂದೆ-ತಾಯಿ ಈ ಜಗದಲ್ಲಿ ಕರುಣಿಸಿದ ಆ ಭಗವಂತ".ನನಗಂತೂ ತುಂಬಾ ಸಂತೋಷವೆನಿಸುತ್ತಿತ್ತು ಅವರನ್ನು ನೋಡಿದಾಗಲೆಲ್ಲಾ.
ಕಾಲೇಜು ಜೀವನ ಮುಗಿದ ಮೇಲೆ ನಾನು ಅವನು ಇಬ್ಬರೂ ಕೇಂದ್ರ ಸರ್ಕಾದ ಉದ್ಯಮದಲ್ಲಿ ಕೆಲಸ ಗಿಟ್ಟಿಸಿದೆವು ಹಾಗು ಅಕೆಯೊ ಕೇಂದ್ರ ಸರ್ಕಾರದ ಉದ್ಯಮದಲ್ಲೇ ಕೆಲಸಕ್ಕೆ ಸೇರಿದಳು. ಕೆಲಸಕ್ಕೆ ಸೇರಿದ ಮೇಲೆಯೇ ಎಲ್ಲವೂ ಬದಲಾಗಿತ್ತು. ಅವರಿಬ್ಬರೂ ಭೇಟಿಯಾಗುತ್ತಿದುದು ತುಂಬಾ ಅಪರೂಪವೇ ಆಗಿತ್ತು. ಆದರೆ ಅವನ ಭಾವನೆಗಳಲ್ಲಿ, ಆ ನೋವಿನ ಛಾಯೆ ಅಪರೂಪವಾಗಿಯೇ ಕಾಣಿಸುತ್ತಿತ್ತು. ನಾನೇ ಅವನ್ನು ಬಲವಂತವಾಗಿ ವಿಷಯಗಳನ್ನು ಕೆದಕಿದಾಗಲೂ ಅವನು ಎಂದೂ ಬಾಯಿಬಿಡಲಿಲ್ಲ. ನನಗಂತೂ ಅವನ ನಡೆ ಕಗ್ಗಂಟಾಗೆ ಉಳಿಯಿತು.
ಅಂದು ಶನಿವಾರ ಶ್ರಾವಣ ಹುಣ್ಣಿಮೆ, ನಾನು ಹಾಗು ಅವನು ಊರಿಗೆ ಹೊರೆಟೆವು ರೈಲಿನಲ್ಲಿ. ಸುಂದರ ಆಕಾಶದಲ್ಲಿ ಮೊಡಿದ ಚಂದ್ರಮ ನಗುನಗುತ್ತಾ ತಂಗಾಳಿಯನ್ನು ಬೀಸುತ್ತಿದ್ದ. ಹಾಗೆಯೇ ನನ್ನ ಮುಂದೆ ಕುಳಿತ ’ಶಶಾಂಕ’ ಆ ಚಂದ್ರಮನಿಗೆ ಸವಾಲೆಂಬಂತೆ ನಗುನಗುತ್ತಾ ವಾಕ್ಸುಧೆಯನ್ನು ಹರಿಬಿಟ್ಟು ನಗುವನ್ನು ಪಸರಿಸುತ್ತಿದ್ದ. ಆಕಸ್ಮಿಕವಾಗಿ ಆಕೆಯೊ ರೈಲಿನಲ್ಲಿ ಕಾಣಿಸಿಕೊಂಡಳು ದಿಡೀರನೆ. ಅವಳು ವ್ಯಾನಿಟಿ ಬ್ಯಾಗ್ ನಿಂದ ಸುಂದರವಾದ ರಕ್ಷೆಯೊಂದನ್ನು ತೆಗೆದು ನನ್ನ ಕೈಗೊಂದು ಕಟ್ಟಿ ನನ್ನಿಂದ ನೂರು ರೂ ವಸೂಲಿ ಮಾಡಿದಳು. ಹಾಗೆಯೇ ಮತ್ತೊಂದನ್ನು ತೆಗೆದು ಅವನ ಕೈಗೆ ಕಟ್ಟಿ ಅವನ ಜೋಬಿನಿಂದ ನೂರು ರೂ ಹಾರಿಸಿಕೊಂಡು ಹೊರಟೇ ಹೋದಳು. ಬರಸಿಡಿಲಂತೆ ಬಂದ ಅವಳು ಅವನ ಮುಖದಲ್ಲಿ ನಗುವನ್ನೇ ಹಾರಿಸಿಕೊಂಡು ಹೋದಳು. ನೋವಿನ ಛಾಯೆ ’ಶಶಾಂಕ’ನನ್ನು ಆವರಿಸಿತ್ತು. ಅವನ ಮುಖದಲ್ಲಿ ಆದ ಬದಲಾವಣೆ ನನ್ನಲ್ಲಿ ಅಪಾರವಾದ ನೋವು ತಂದು ಅವನ ಮುಖನೋಡಲಾಗದೆ ಕಿಟಕಿಯ ಆಕಾಶದತ್ತ ನೋಡತೊಡಗಿದೆ. ನೋಡನೋಡುತ್ತಿದ್ದಂತೆ ಚಂದ್ರಮನನ್ನು ಆಕಾಶದ ಎಲ್ಲಿಂದಲೋ ಹಾರಿಬಂದ ಕಾರ್ಮೋಡಗಳು ಮುತ್ತಿದವು. ಬಿರುಗಾಳಿ ಬೀಸತೊಡಗಿತು. ಆ ಬಿರುಗಾಳಿಯನ್ನೂ ಲೆಕ್ಕಿಸದೆ ರೈಲು ವೇಗವಾಗಿ ಬೆಟ್ಟಗಳ ನಡುವೆ ಸಾಗತೊಡಗಿತು. ಅರಳಿದ ಹೃದಯವೊಂದು ನೋವಿನ ಬಿರುಗಾಳಿಗೆ ಸಿಕ್ಕು ಬಾಡುತ್ತಿತ್ತು.

’ಹ್ಯಾಪಿ ಜರ್ನಿ’

ರವಿ ತನ್ನ ಎಡಗೈಗೆ ಕಟ್ಟಿರುವ ಗಡಿಯಾರದ ಕಡೆಗೆ ನೋಡುತ್ತ "ಸಮಯ ರಾತ್ರಿ ೯.೪೫ ಆಗಲೇ ಆಗಿಹೋಯಿತು, ಓ ಹಂಪಿ ರೈಲು ಬರಲು ಇನ್ನು ಕೆಲವೇ ನಿಮಿಷಗಳು ಉಳಿದಿವೆ" ಎಂದೆನ್ನುಕೊಳ್ಳುತ್ತಾ ತುರುಸಾಗಿ ಯಶವಂತಪುರದ ರೈಲ್ವೇ ನಿಲ್ದಾಣದ ಕಡೆಗೆ ಹೊರಟ. ಟಿಕೆಟನ್ನು ಪಡೆದುಕೊಂಡು ಮನೆಯ ಬಗ್ಗೆ ಯೋಚನೆ ಮಾಡುತ್ತಾ ಅಕ್ಕನ ಮಕ್ಕಳಾದ ಅಂಜು ಹಾಗು ಭೂಮಿ ಯರ ತುಂಟ ಚೇಷ್ಟೆಯನ್ನು ನೆನೆಯುವಷ್ಟರಲ್ಲಿಯೇ ರೈಲು ಆಗಮಿಸಿತ್ತು.
ಶನಿವಾರವಾದುದರಿಂದ ಎಲ್ಲಾ ಬೋಗಿಗಳಲ್ಲೂ ಜನರು ತುಂಬಿದ್ದರು. ಹುಬ್ಬಳ್ಳಿಯ ಬೋಗಿಗಳಲ್ಲಿ ಜನ ಕಡಿಮೆ ಇದ್ದುದರಿಂದ ರವಿ ಓಡಿ ಹುಬ್ಬಳ್ಳಿಯ ಬೋಗಿಯನ್ನು ಹತ್ತಿ ಸೀಟನ್ನು ಹಿಡಿಯಬೇಕಾಯಿತು. ಎದುರು ಬದಿಯ ಸೀಟಿನಲ್ಲಿ ಒಂದು ಕುಟುಂಬವು ಬೀಡುಬಿಟ್ಟಿತ್ತು. ಆ ಕುಟುಂಬದಲ್ಲಿ ಗಂಡ-ಹೆಂಡತಿ ಹಾಗು ಮಗುವೊಂದು ಇತ್ತಾದರೂ ನಾಲ್ಕು ಸೀಟುಗಳನ್ನು ಅವರೇ ಆಕ್ರಮಿಸಿದ್ದರು. ಸೀಟನ್ನು ಹುಡುಕುತ್ತ ಬಂದ ಜನ, ಅದನ್ನು ನೊಡಿಯೊ ಮನಸ್ಸಿನಲ್ಲಿ ಬೈದುಕೊಳ್ಳುತ್ತಾ ಅಲ್ಲಿ ಕುಳಿತುಕೊಳ್ಳದೇ ಹೋದವರು ಬಹಳ.
ಯಲಹಂಕ ರೈಲ್ವೇನಿಲ್ದಾಣ ಬರುತ್ತಲೇ ಜನರು ಬೋಗಿಯೊಳಕ್ಕೆ ನುಗ್ಗಿ ಸೀಟಿಗಾಗಿ ಹುಡುಕುತ್ತಾ ಪರಿತಪಿಸುವ ದೃಶ್ಯ ಸಾಮಾನ್ಯವಾದರೂ ಪ್ರತಿದಿನ ಇಂತಹ ದೃಶ್ಯಗಳನ್ನು ನೋಡೋದು ರವಿಗೆ ಅದು ಸಾಮಾನ್ಯವೇ!. ಹೀಗೇ ಸೀಟಿಗಾಗಿ ಹುಡುಕುತ್ತಾ ಬಂದ ಒಬ್ಬ ಯುವಕ ಆ ಕುಟುಂಬವಿದ್ದ ಕಡೆ ಒಬ್ಬರು ಕುಳಿತುಕೊಳ್ಳುವಷ್ಟು ಜಾಗವಿದ್ದದರಿಂದ ಅಲ್ಲಿಯೇ ಕುಳಿತುಕೊಂಡ. ಆಗ ಆ ಕುಟುಂಬದ ಮಹಾನುಭಾವ ಅ ಯುವಕನ ಮೇಲೆ ರೇಗಾಡುತ್ತಾ " ಹೆಂಗಸು ಕಾಣಿಸಿದಳೆಂದು ಇಲ್ಲಿ ಕುಳಿತುಕೊಂಡೆಯೇನೋ? ಬದಮಾರ್ಷ, ಬೇರೆ ಎಲ್ಲಿಯೊ ಜಾಗಸಿಗಲಿಲ್ಲವೇ?" ಅವನ ಮಾತುಗಳನ್ನು ಕೇಳಿ ಆ ಯುವಕ ತಬ್ಬಿಬ್ಬಾದನಲ್ಲದೆ, ಕೋಪಾವಿಷ್ಟನಾಗಿ ಅವನನ್ನು ಆ ಯುವಕ ತರಾಟೆಗೆ ತೆಗೆದುಕೊಂಡ. ರೈಲು ಹೊರಡುತ್ತಿದ್ದಂತೆ ಅವರ ಜಗಳವೂ ಮುಂದುವರೆದಿತ್ತು. ರವಿಗೆ ಆ ಕುಟುಂಬದ ಯಜಮಾನನ ಮಾತುಗಳನ್ನು ಕೇಳಿ ಯುವಕನ ಜೊತೆಗೂಡಿ ಜಗಳಕ್ಕಿಳಿಯಬೇಕಾಯಿತು. ಕೊನೆಗೂ ಅವರಿಬ್ಬರನ್ನು ಸಮಾಧಾನ ಪಡಿಸುವಷ್ಟರಲ್ಲಿ ರವಿಗೆ ಸಾಕು ಸಾಕಾಗಿತ್ತು.
ಆ ಕುಟುಂಬದ ಯಜಮಾನನ ಸಂಕುಚಿತ ಸ್ವಭಾವಕ್ಕೆ ಏನು ಹೇಳಬೇಕೆಂದು ರವಿಗೆ ಅರ್ಥವಾಗಲಿಲ್ಲ." ನಾವು ಅಲ್ಪಸಂಖ್ಯಾತರು, ನಮ್ಮ ಮೇಲೆ ದೌರ್ಜನ್ಯಮಾಡುವಿರಾ, ನನ್ನ ಹೆಂಡತಿಯನ್ನು ಅವಮಾನಿಸುವುದಕ್ಕಾಗಿ ಬೇರೆಡೆ ಜಾಗವಿದ್ದರೂ ಇಲ್ಲಿ ಬಂದು ಜಗಳ ಮಾಡುತ್ತಿರುವುರಾ...ಇತ್ಯಾದಿ..."ಗೊಣಗಾಡುತ್ತಿದ್ದ. ಅದ್ಯಾವುದನ್ನೂ ಲೆಕ್ಕಿಸದೇ ಆ ಯುವಕ ಹಾಗು ರವಿ ಕೋಪಾವಿಷ್ಟರಾಗಿ ಸಮ್ಮನೇ ಕುಳಿತುಕೊಳ್ಳಬೇಕಾಯಿತು.
" ನಾವು ಭಾರತೀಯರು ಹೀಗೆ ವಿನಾಕಾರಣ ಜಗಳವಾಡುತ್ತಾ ಹೋದರೆ ಅದರ ಪರಿಣಾಮ ಏನಾಗಬಹುದು ನೀವೇ ಯೋಚಿಸಿ. ಮೊದಲು ನಾವು ಭಾರತೀಯರೆಂಬ ಮಧುರ ಭಾವನೆ ನಮ್ಮ ಮನಸ್ಸುಗಳಲ್ಲಿ ಬರಬೇಕು. ನಾನು ಹಿಂದು,ಅಲ್ಪಸಂಖ್ಯಾತ..ಇನ್ಯಾವುದೋ ಜಾತಿಯವನು,ಮತದವನು,ಧರ್ಮದವನು ಎಂಬ ಸಂಕುಚಿತ ಮನೋಭಾವಗಳನ್ನು ತೊಡೆದು ಹಾಕುವುದಾದರೂ ಹೇಗೆ? ಸರ್ಕಾರದ ಪಕ್ಷಪಾತ ನೀತಿ ಜನರ ಮನಸ್ಸುಗಳಲ್ಲಿ ವಿಭಜನೆಯ ಬೀಜವನ್ನು ಬಿತ್ತುತ್ತಿರುವಾಗ ಆಂಗ್ಲರ ’ಒಡೆದು ಆಳುವ ನೀತಿ"ಯನ್ನು ಸರ್ಕಾರಗಳು ಏಕೆ ಪಾಲಿಸುತ್ತಿವೆ? ’ಹೇಗೆ ರಾಜನೋ ಹಾಗೇ ಪ್ರಜೆಗಳು’ ಎನ್ನುವ ಗಾದೆ ರವಿಯ ಮನದಲ್ಲಿ ಮೊಡಿದರೆ,ಕೋಪದ ಆವೇಗದಲ್ಲಿ ಬುಸುಗುಡುತ್ತಿದ್ದ ಆ ಕುಟುಂಬದ ಯಜಮಾನ ಟಿಕೆಟಿನ ಮೇಲೆ ಬರೆದ ’ಹ್ಯಾಪಿ ಜರ್ನಿ’ ಓದುತ್ತಾ ಆ ಯುವಕ ಹಾಗು ರವಿಯ ಮೇಲೆ ಕೆಂಡಕಾರುತ್ತಿದ್ದ. ರವಿ ತನ್ನ ಊರು ಬಂತೆಂದು ಯುವಕನಿಗೆ ತನ್ನ ಸೀಟನ್ನು ಬಿಟ್ಟುಕೊಡುತ್ತಾ,ಯುವಕನಿಗೆ ಶುಭಕೋರುತ್ತಾ, ಬೋಗಿಯ ಬಾಗಿಲಿಗೆ ಬಂದು ನಗುನಗುತ್ತಾ ಆಹ್ವಾನಿಸುತ್ತಿದ್ದ ಹುಣ್ಣಿಮೆಯ ಚಂದ್ರನನ್ನು ನೋಡುತ್ತಾ, ನಿಂತ ರೈಲಿನಿಂದ ಇಳಿದು ಮನೆಯಕಡೆ ಹೆಜ್ಜೆಹಾಕುತ್ತಿದ್ದಂತೆಯೇ ರೈಲ್ವೇ ನಿಲ್ದಾಣದ ಗಡಿಯಾರ ಹನ್ನೆರಡಾಯಿತೆಂದು ಶಬ್ದಮಾಡುತ್ತಿತ್ತು.ರವಿ ಕತ್ತಲಲ್ಲಿ ರೈಲ್ವೇ ಹಳಿಯ ಮೇಲೆ ನಡೆಯುತ್ತಾ ಮನೆಯ ಕಡೆ ಹೆಜ್ಜೆಹಾಕಿದ.